Sunday, March 29, 2020

ದೇಶದ ನೋವನ್ನು ಮರೆಸಲು ಹೆರಿಗೆ ನೋವನ್ನೂ ನುಂಗಿದ ಮಹಾ ತಾಯಿ

ಕೊರೋನಾ ಎಂಬ ಮಹಾಮಾರಿ ದಿನೇ ದಿನೇ ಈ  ಜಗತ್ತನ್ನು ಆವರಿಸಿಕೊಳ್ಳುತ್ತಿದೆ.  ಚೀನಾ ಬಯೋ ವಾರ್ ಮಾಡುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.  ಅಮೇರಿಕಾ ಅಧ್ಯಕ್ಷರಂತೂ ಕೊರೊನ ವೈರಸ್ ಅನ್ನು ಚೀನಾ ವೈರಸ್ ಎಂದೇ ಕರೆದು ಪರೋಕ್ಷವಾಗಿ ಚೀನಾವನ್ನು ಗುರಿ ಮಾಡುತ್ತಿದ್ದಾರೆ.  ಇನ್ನೂ ಕೆಲವು ಸಂಸ್ಥೆಗಳು ಕೊರೊನದಿಂದಾದ ನಷ್ಟಕ್ಕೆ ಚೀನಾ ಕಾರಣವೆಂದು ಆ ನಷ್ಟ ತುಂಬಿಕೊಡುವಂತೆ ಚೀನಾ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನೂ ಹೂಡಿವೆ.
 ಇಷ್ಟೆಲ್ಲಾ ನಡೆದರೂ ತನ್ನದೇ ದೇಶದಲ್ಲಿ ಹುಟ್ಟಿದ  ಮಹಾಮಾರಿಯನ್ನು ಹತ್ತಿಕ್ಕಲಾಗದೆ ಒದ್ದಾಡುತ್ತಿದ್ದರೂ ಜಗತ್ತಿನೆದುರು ಎಲ್ಲಾ ಚೆನ್ನಾಗಿದೆ ಎಂದು ತೋರಿಸಿಕೊಳ್ಳುತ್ತಿರುವ ಚೀನಾ ಈಗ ಜಗತ್ತಿಗೆ ತುರ್ತಾಗಿ ಬೇಕಿರುವ  ಕೊರೋನಾ ತಪಾಸಣಾ ಕಿಟ್ ಗಳನ್ನು ಸರಬರಾಜು ಮಾಡುವುದಾಗಿ ಹೇಳಿಕೊಂಡಿದೆ.  ಅದಕ್ಕೆ ಪೂರಕವಾಗಿ   ಫ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ದುಬಾರಿ ಬೆಲೆಗೆ  ಈ ಕಿಟ್ ಗಳನ್ನು ಕೊಡುವುದಾಗಿ ಒಪ್ಪಂದವನ್ನೂ ಮಾಡಿಕೊಂಡಿದೆ.
ಈ ಕೊರೋನಾ ಇಷ್ಟು ವೇಗವಾಗಿ ಹರಡುವುದಕ್ಕೆ ಕಾರಣವೆ ಇದನ್ನು ಪರೀಕ್ಷಿಸಿ ದೃಢಪಡಿಸುವ ವ್ಯವಸ್ಥೆ ವೇಗವಾಗಿ ಆಗದೆ ಇರುವ ಕಾರಣ.
ಒಬ್ಬ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದರೆ ಅದರ ಗುಣಲಕ್ಷಣಗಳು ಕಾಣಿಸಿಕೊಳ್ಳಲು ಕನಿಷ್ಠ 3-4 ದಿನಗಳು ಬೇಕು.  ಅಲ್ಲಿಂದ ಆ ವ್ಯಕ್ತಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಿದರೆ  ಅದರ ಪರೀಕ್ಷೆ ಮಾಡಲು ಸುಮಾರು 7-8 ಗಂಟೆ ಸಮಯ ತೆಗೆದುಕೊಳ್ಳುತ್ತದೆ.  ಅಲ್ಲಿಂದ ರಿಪೋರ್ಟ್ ಬರುವುದಕ್ಕೆ ಮತ್ತೆ 2-3 ದಿನ ಹಿಡಿಯುತ್ತದೆ.  ಹೀಗೆ ಒಬ್ಬ ಕೊರೋನಾ ಸೋಂಕಿತನನ್ನು  ಕಂಡು ಹಿಡಿಯಲು ಕನಿಷ್ಠ 8-10 ದಿನಗಳ ಸಮಯ ತಗುಲುತ್ತದೆ. ಅಷ್ಟರಲ್ಲಿ ಆತ ಇನ್ನೂ ನೂರು ಮಂದಿಗೆ ಆ ಸೋಂಕನ್ನು ತಗುಲಿಸಿರುತ್ತಾನೆ. ಇದಕ್ಕೆ ಕಾರಣ ಕೊರೋನಾ ತಪಾಸಣಾ ಸಲಕರಣೆಗಳ ಕೊರತೆ.   ಭಾರತದಲ್ಲಂತೂ ಈ ಸಮಸ್ಯೆ ಬೇರೆ ದೇಶಗಳಿಗೆ ಹೋಲಿಸಿದರೆ ತುಸು ಹೆಚ್ಚೇ ಇದೆ.  ಪುಟ್ಟ ರಾಷ್ಟ್ರ ದಕ್ಷಿಣ ಕೊರಿಯದಲ್ಲೇ 650 ಲ್ಯಾಬೊರೇಟರಿ ಗಳು ಇರುವಾಗ 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ 118 ಸರ್ಕಾರಿ ಹಾಗೂ 50 ಖಾಸಗಿ ಲ್ಯಾಬೊರೇಟರಿ ಗಳಿವೆಯಷ್ಟೇ.   ಹಾಗಾಗಿ ಇದುವರೆಗೂ ನಮ್ಮ ದೇಶದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಬಂದವರನ್ನಷ್ಟೇ ಪರೀಕ್ಷೆಗೊಳಪಡಿಸಲಾಗುತ್ತಿತ್ತು ಈಗ ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ  ದಾಖಲಾಗುವ ಎಲ್ಲರನ್ನೂ ಪರೀಕ್ಷಿಸುವಂತೆ  ಆದೇಶಿಸಲಾಗಿದೆ. ಆದರೂ  ಇದು ವಿಶ್ವದ ಪರೀಕ್ಷಾ ಸರಾಸರಿಗೆ ಹೋಲಿಸಿದರೆ ಭಾರತದಲ್ಲಿ ಅತ್ಯಂತ ಕಡಿಮೆ ಅಂದರೆ  ಒಂದು ದಶಲಕ್ಷದಲ್ಲಿ ಸರಾಸರಿ 6.8 ರಷ್ಟು ಮಂದಿಯನ್ನು ಮಾತ್ರ ಪರೀಕ್ಷೆಗೊಳಪಡಿಸಲಾಗುತ್ತಿದೆ.
ಈ ಸಂಕಷ್ಟದ ನಡುವೆ ಭಾರತಕ್ಕೊಂದು ಆಶಾ ಕಿರಣ ಮೂಡಿದೆ.  ಜಗತ್ತು ಕೊರೋನಾ ತಪಾಸಣಾ ಕಿಟ್ ಗಾಗಿ ಚೀನಾದ ಎದುರು ಮಂಡಿಯೂರುವ ಪರಿಸ್ಥಿತಿಯಲ್ಲಿದ್ದರೆ ಭಾರತದ ವಿಜ್ಞಾನಿಗಳು ಸದ್ದಿಲ್ಲದೇ ಈ ಕಿಟ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲು ಸಿದ್ದರಾಗಿದ್ದಾರೆ.
ಪುಣೆಯ ಮೈಲ್ಯಾಬ್ ಡಿಸ್ಕವರಿ ಎನ್ನುವ ಸಂಸ್ಥೆ ಕಳೆದ ಗುರುವಾರ ಭಾರತದ ಸ್ವದೇಶಿ  ಪ್ರಥಮ ಕೊರೋನಾ ಪರೀಕ್ಷಾ ಕಿಟ್ ಅನ್ನು  ತಯಾರಿಸಿ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ನ ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಯಿಂದ ನೂರು ಪ್ರತಿಶತ ಫಲಿತಾಂಶದೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಸಿಹಿ ಸುದ್ದಿಯ ಹಿಂದೆ ದೇಶವೇ ಹೆಮ್ಮೆ ಪಡುವಂತಹ ಭಾವನಾತ್ಮಕ ಸಂಗತಿಯೊಂದಿದೆ.
  ಈ
ಕೊರೋನಾ ವೈರಸ್ ಪರೀಕ್ಷಾ ಕಿಟ್ ಅರ್ಥಾತ್ ಪ್ಯಾಥೋ ಡಿಟೆಕ್ಟ್ ಅನ್ನು ಕಂಡು ಹಿಡಿದ ತಂಡವನ್ನು ಮುನ್ನಡೆಸಿದ ಮೈಲ್ಯಾಬ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಸಂಸ್ಥೆಯ ಮುಖ್ಯಸ್ಥೆ  ಮಿನಾಲ್ ದಿಖಾವೆ ಬೋಸ್ಲೆ ಎನ್ನುವ ಹೆಣ್ಣುಮಗಳೆ ಆ ಹೆಮ್ಮೆಗೆ ಕಾರಣ.  ಯಾಕೆಂದರೆ ತುಂಬು ಗರ್ಭಿಣಿಯಾಗಿದ್ದ ಮಿನಾಲ್ 3 ರಿಂದ 4 ತಿಂಗಳು ತಗಲುವ ಕಿಟ್ ಡೆವಲಪ್ಮೆಂಟ್ ಕಿಟ್ ಡೆವಲಪ್ಮೆಂಟ್ ಕೆಲಸವನ್ನು ಕೇವಲ ಆರು ವಾರಗಳಲ್ಲಿ ಮುಗಿಸಿದ್ದಾರೆ.  ಈಕೆ ಕಳೆದ ವಾರವಷ್ಟೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾಳೆ.  ಕಳೆದ ಫೆಬ್ರುವರಿಯಲ್ಲಿ  ತನ್ನ ಹೆರಿಗೆಗೆ ದಿನ ಎಣಿಸುತ್ತಿರುವಾಗಲೇ ಕೊರೋನಾ ದೇಶವನ್ನು ವ್ಯಾಪಿಸಿಕೊಂಡು ಕೊರೋನಾ ಪರೀಕ್ಷಾ  ಕಿಟ್ ತಯಾರಿಕೆಯ ಜವಾಬ್ದಾರಿ ಇವರ ಹೆಗಲ ಮೇಲೆ ಬೀಳುತ್ತದೆ.   ಗರ್ಭದೊಳಗೆ ಪುಟ್ಟ ಕಂದಮ್ಮನನ್ನು ಹೊತ್ತು ದೇಶದ ಜನರ ಆರೋಗ್ಯದ ಹೊಣೆಯನ್ನೂ ಹೊತ್ತು ರಾಷ್ಟ್ರ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡು ಹೆರಿಗೆಗೆ ತೆರಳುವ ಕೇವಲ ಒಂದೇ ಒಂದು ದಿನದ ಮುಂಚೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ   ಮೌಲ್ಯಮಾಪನಕ್ಕಾಗಿ ಕಿಟ್ ಗಳನ್ನು ಹಸ್ತಾಂತರಿಸಿದ್ದಾರೆ. ಮರುದಿನ ತಾನು ಹೆರಿಗೆ ಕೊಠಡಿಗೆ ತೆರಳುವ ಒಂದು ಗಂಟೆಯ ಮುನ್ನ ಇಂಡಿಯನ್ ಡ್ರಗ್ ಕಂಟ್ರೋಲ್ ಅಥಾರಿಟಿ ಸಿಡಿಎಸ್ ಸಿಓ ಸಂಸ್ಥೆಗೆ ಅನುಮತಿಗಾಗಿ ತಮ್ಮ ಪ್ರಾಜೆಕ್ಟ್ ನ ಪ್ರಪೋಸಲ್ ಅನ್ನು ಮಂಡಿಸುತ್ತಾರೆ. ಅಬ್ಬಾ ಅಂದೆಂತಹ ಧೀ ಶಕ್ತಿ.... ಇದಲ್ಲವೇ ದೇಶದ ಬಗೆಗಿನ ಕಾಳಜಿ..  ದೇಶದ ಜನರ ಆರೋಗ್ಯಕ್ಕಾಗಿ ಹೆರಿಗೆ ನೋವನ್ನು ನುಂಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸಿದ ಇಂತಹ ದಿಟ್ಟ ಹೆಣ್ಣುಮಕ್ಕಳು ನಿಜಕ್ಕೂ ಈ ನೆಲದ ಹೆಮ್ಮೆಯೇ ಸರಿ.
ಈ ದೇಶದ ಪರಂಪರೆಯೇ ಹಾಗೆ ನೋಡಿ... ರಾಷ್ಟ್ರ ಸಂಕಷ್ಟದಲ್ಲಿದ್ದಾಗಲೆಲ್ಲ ತನ್ನ ವೈಯಕ್ತಿಕ ನೋವು ನಲಿವುಗಳನ್ನು ಮರೆತು ಹೋರಾಡುವುದು ಈ ನೆಲದ ಇತಿಹಾಸದಲ್ಲಿ ಹಾಸುಹೊಕ್ಕಾಗಿದೆ. ಇಂತವರಿಗಾಗಿಯೇ ನಮ್ಮ ಪ್ರಧಾನಿ ಅಂದು ಚಪ್ಪಾಳೆ ತಟ್ಟಲು ಹೇಳಿದ್ದು.
ಅಂದ ಹಾಗೆ ಮಿನಾಲ್ ದಾಖ್ವೆ  ಬೋಸ್ಲೆ  ಮತ್ತು ಅವರ ತಂಡ ತಯಾರಿಸಿರುವ ಈ ಕಿಟ್ ನಲ್ಲಿ ಏಕ ಕಾಲಕ್ಕೆ ನೂರು ಮಂದಿಯನ್ನು ಪರೀಕ್ಷಿಸಬಹುದು.  ಮತ್ತು ಈ  ಕಿಟ್ ಗೆ ತಗುಲುವ ವೆಚ್ಚ ಕೇವಲ 1200 ರೂಪಾಯಿಗಳು.  ಆದರೆ ಇದೆ ಕಿಟ್ ಅನ್ನು ಭಾರತ ವಿದೇಶಗಳಿಂದ ಆಮದು ಮಾಡಿಕೊಳ್ಳುವುದಕ್ಕೆ ತಗುಲುತ್ತಿದ್ದ ವೆಚ್ಚ ಬರೋಬ್ಬರಿ ಪ್ರತಿ ಕಿಟ್ ಗೆ 4500 ರೂಪಾಯಿಗಳು.   ಅಷ್ಟೇ ಅಲ್ಲ ವಿದೇಶಿ ಕಿಟ್ ಗಳಲ್ಲಿ ಪರೀಕ್ಷೆ ನಡೆಸಲು 6 ರಿಂದ 7 ಗಂಟೆ ಸಮಯ ಬೇಕಿತ್ತು.  ಆದರೆ ಈ  ಕಿಟ್ ನಿಂದ ಕೇವಲ ಎರಡೂವರೆ ಗಂಟೆಗಳಲ್ಲಿ ಪರೀಕ್ಷೆ ನಡೆಸಬಹುದು. ಈಗಾಗಲೇ ಮೈಲ್ಯಾಬ್ ಸಂಸ್ಥೆ ಮೊದಲ ಹಂತದಲ್ಲಿ 150 ಕಿಟ್ ಗಳನ್ನು ಪುಣೆ ಸೇರಿದಂತೆ ಮುಂಬೈ, ದೆಹಲಿ,  ಗೋವಾ ಮತ್ತು ಬೆಂಗಳೂರಿನ ಲ್ಯಾಬ್ ಗಳಿಗೆ ಕಳುಹಿಸಿಕೊಟ್ಟಿದೆ. ಮತ್ತು ಈ  ವಾರಾಂತ್ಯದಲ್ಲಿ ಕೆಲಸ ಮುಂದುವರೆಸಿರುವ ಸಂಸ್ಥೆ ಸೋಮವಾರ ಮತ್ತೊಂದು ಹಂತದಲ್ಲಿ ಕಿಟ್ ಗಳನ್ನು ವಿತರಿಸಲಿದೆ.
ಇದರೊಂದಿಗೆ ಹೆಚ್ ಐ ವಿ,  ಹೆಪಾಟೈಟಿಸ್ ಬಿ,  ಸಿ ಸೇರಿದಂತೆ ಹಲವು ರೋಗಗಳನ್ನು ಪತ್ತೆ ಹಚ್ಚುವ ಪರೀಕ್ಷಾ ಕಿಟ್ ಗಳನ್ನು ತಯಾರಿಸಿರುವ  ಮೊಲಿಕ್ಯುಲಾರ್ ಡಯಗ್ನೊಸ್ಟಿಕ್ ಕಂಪನಿ 1 ಲಕ್ಷ ಕೊರೋನಾ ಪರಿಕ್ಷಾ ಕಿಟ್ ಗಳನ್ನು ಪೂರೈಸುವುದಾಗಿ ಹೇಳಿದ್ದು ಅಗತ್ಯ ಬಿದ್ದಲ್ಲಿ 2 ಲಕ್ಷ ಕಿಟ್ ಗಳನ್ನು ತಯಾರಿಸುವುದಾಗಿ ಹೇಳಿದೆ.
ಇದು ಭಾರತ ಕೊರೋನಾ ಎಂಬ ಹೆಮ್ಮಾರಿಯ ವಿರುದ್ಧ  ಹೊರಾಡಲು ತಯಾರಾದ ಪರಿ.  ನಾವೆಲ್ಲ 21 ದಿನ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಕುವುದಕ್ಕೆ ಪರದಾಡುತ್ತಿದ್ದರೆ ಅಲ್ಲಿ ಮಿನಾಲ್ ದಾಖ್ವೆ ಯಂತಹ ಅದೆಷ್ಟೋ ಮಂದಿ ನಮಗಾಗಿ ತಮ್ಮ ಬದುಕನ್ನೇ ಪಣವಾಗಿಟ್ಟು ಹೋರಾಡುತ್ತಿದ್ದಾರೆ.  ಅಂತವರಿಗಾಗಿ ನಮ್ಮದೊಂದು ಪ್ರಾರ್ಥನೆ ಇರಲಿ.
✍ಕಾಳಿಕಾ ಛಾಯೆ

Saturday, March 28, 2020

21 ದಿನದ ಕೊರೋನಾ ಗೃಹಬಂಧನವನ್ನು ಎದುರಿಸುವುದು ಹೇಗೆ?

ಕೊರೋನಾ ಎಂಬ ಮಹಾಮಾರಿ ಜಗತ್ತನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.  ಈ ಸಂದರ್ಭ ದೇಶವಾಸಿಗಳನ್ನು ರಕ್ಷಿಸುವುದಕ್ಕಾಗಿ ಈ ದೇಶದ ಪ್ರಧಾನಿ ನರೇಂದ್ರ ಮೋದಿಜೀ  21 ದಿನದ Lockdown ಘೋಷಿಸಿದ್ದಾರೆ. 21 ದಿನ ಮನೆಯೊಳಗೇ ಕುಳಿತು ಮಾಡುವುದಾರೂ ಏನು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಈ 21 ದಿನ ಎಲ್ಲರೂ ಗೃಹಬಂಧನವನ್ನು ಎದುರಿಸಲೇಬೇಕು. ಹಾಗೆಂದು ಸುಮ್ಮನೆ ಕುಳಿತು ಬಿಟ್ಟರೆ ಕೊರೊನಗಿಂತ ದೊಡ್ಡ ಶತ್ರು ಆಲಸ್ಯ ನಮ್ಮನ್ನು ಕೊಂದು ಬಿಡುತ್ತದೆ. ಅದಕ್ಕಾಗಿ ಒಂದಷ್ಟು ಯೋಜನೆಗಳನ್ನು ಮಾಡಿಕೊಳ್ಳಲೇ ಬೇಕಿದೆ. ಅದಕ್ಕಾಗಿಯೇ ಇಲ್ಲೊಂದಷ್ಟು ಸಲಹೆ ನೀಡಿದ್ದೇನೆ ನೀವು ಪ್ರಯತ್ನಿಸಿ. ಹಿಂದೂ ಸಂಪ್ರದಾಯದಲ್ಲಿ 21 ದಿನಕ್ಕೆ ಬಹಳ ಪ್ರಾಮುಖ್ಯತೆ ಇದೆ.  21 ದಿನ ಯಾವುದೇ ಕಾರ್ಯವನ್ನು ಎಡೆಬಿಡದೆ ಮಾಡಿಕೊಂಡು ಬಂದರೆ ನಂತರ ಅದು ನಿರಂತರವಾಗಿ ಮುಂದುವರಿಸಿಕೊಂಡು ಹೋಗಲು ರೂಢಿಯಾಗಿ ಬಿಡುತ್ತದಂತೆ.
ಜಪ-ತಪ,  ಧ್ಯಾನ ಯೋಗದಂತಹ ಅಭ್ಯಾಸಗಳನ್ನು ಮಾಡುವ ಆಸಕ್ತಿ ಇರುವವರು 21 ದಿನ ಮನೆಯಲ್ಲೇ ಇರುವುದರಿಂದ ತಕ್ಷಣವೇ ಪ್ರಾರಂಭಿಸಿ.  ಮತ್ತೆ ತಾನಾಗಿಯೇ ಅದು ಮುಂದುವರಿಸಿಕೊಂಡು
ಹೋಗಲು ಸಮಯವನ್ನು ಹೊಂದಿಸಿಕೊಳ್ಳುವಂತೆ ಮಾಡುತ್ತದೆ.
ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಬೇಕು ಅಂತ ಪ್ರಯತ್ನಿಸುತ್ತಿರುವವರು ಈ 21 ದಿನ ಮನೆಯವರ ಬಳಿ ತಪ್ಪದೆ ಬೇಗ ಎಬ್ಬಿಸುವುದಕ್ಕೆ ಹೇಳಿ 21 ದಿನದ ಬಳಿಕ ನಿಮ್ಮ ದೇಹ ಮತ್ತು ಮನಸ್ಸು ಬೇಗ ಏಳುವುದಕ್ಕೆ ಒಗ್ಗಿಕೊಂಡು ಬಿಡುತ್ತದೆ.  ನಂತರ ನೀವು ತಡವಾಗಿ ಏಳಬೇಕೆಂದರೂ ನಿದ್ರೆ ಬರುವುದಿಲ್ಲ.
ಬಹಳ ಜನರಿಗೆ ನಿತ್ಯ ಕೆಲಸದ ಒತ್ತಡದಲ್ಲಿ ಹೊರಗಿನ ಜಂಕ್ ಫುಡ್ ಗಳನ್ನು ತಿಂದು ದೇಹದ  ನಿಯಂತ್ರಣ ಮೀರಿ ಬೊಜ್ಜು ಆವರಿಸಿಕೊಂಡಿರುತ್ತದೆ.  21 ದಿನ ಮನೆಯಲ್ಲೇ ಇರುವುದರಿಂದ  ಆಹಾರದಲ್ಲಿ ನಿಯಂತ್ರಣವಿರಿಸಿಕೊಂಡು ವ್ಯಾಯಾಮಕ್ಕೂ ಆರಾಮವಾಗಿ  ಸಮಯ ಕೊಟ್ಟು ನಿಮ್ಮ ದೇಹದ ಆರೈಕೆ ಮಾಡಿಕೊಳ್ಳಿ.
21 ದಿನ ಅಡುಗೆ ಕಲಿಯುವವರಿಗೆ ಸುವರ್ಣ ದಿನ ಕೂಡ.
ಹೆಣ್ಣುಮಕ್ಕಳು  ದಿನ ಕೆಲಸದ ಒತ್ತಡ,  ವಾಷ್ ರೂಮ್ ಗೆ ಹೋಗಬೇಕಾಗುತ್ತದೆ ಅನ್ನುವ ಕಾರಣಗಳಿಂದ ನೀರು ಕುಡಿಯುವುದನ್ನು ಕಡಿಮೆ ಮಾಡಿರುತ್ತೀರಿ. ಈ  21 ದಿನ ಅದೆಲ್ಲದರ ಚಿಂತೆ ಬಿಟ್ಟು  ದಿನಕ್ಕೆ ಅರ್ಧ ಘಂಟೆಗೊಮ್ಮೆ  ಅಲಾರಾಂ ಇಟ್ಟುಕೊಂಡು
6 ಲೀಟರ್ ನೀರು ಕುಡಿಯಿರಿ. 21 ದಿನದಲ್ಲಿ ಮುಖದ ಕಲೆ,  ಮೊಡವೆಗಳೆಲ್ಲ ಮಾಯವಾಗಿರುತ್ತದೆ.
ಹೊಸ ಕರಕುಶಲ ಕಲೆ ಕಲಿಯುವ ಆಸಕ್ತಿ ಇರುವವರು ಈ 21 ದಿನ ಯೂ ಟ್ಯೂಬ್ ವಿಡಿಯೋ ನೋಡಿ ಅದನ್ನು ಪ್ರಯತ್ನಿಸಿ.
ಕೆಲಸದ ಒತ್ತಡದಲ್ಲಿ ಮರೆತೇ ಬಿಟ್ಟಿದ್ದ ನಿಮ್ಮ ಹಳೆಯ ಹವ್ಯಾಸಗಳಿಗೆ ಮತ್ತೆ ಚಾಲನೆ ಕೊಡಿ.
ಇನ್ನುಳಿದಂತೆ ಧೂಳು ಹಿಡಿದ ಪುಸ್ತಕಗಳನ್ನು ಒರೆಸಿ ಮಸ್ತಕದೊಳಗೆ ತುಂಬಿಸಿಕೊಳ್ಳುವ ಪ್ರಯತ್ನ ಮಾಡಿ.
ಹೊಸ ಬಿಸಿನೆಸ್ ಮಾಡಬೇಕು ಅಂತ ಆಸೆ ಇಟ್ಟುಕೊಂಡವರು ಈ 21 ದಿನ ಅದಕ್ಕೆ ಸಂಬಂಧಿಸಿದಂತೆ ಒಂದಷ್ಟು ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕಿ..  ಆನ್ ಲೈನ್ ನಲ್ಲೆ ಅದರ ಸರ್ವೇ ಮಾಡಿಕೊಳ್ಳಿ.
ಹಾ..  ಎಲ್ಲಕ್ಕಿಂತ ಹೆಚ್ಚಾಗಿ ಈ 21 ದಿನದಲ್ಲಿ ನಿಮ್ಮ ಸಂಬಂಧಿಕರು,  ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿ. ಜೀವನದಲ್ಲಿ ಹಿಂದೆಂದೂ ನೀವು ಹೀಗೆ ಬದುಕಿರಲಿಕ್ಕಿಲ್ಲ. ( ನಮ್ಮ ಹಿರಿಯರು ಪ್ಲೇಗ್ ಬಂದಾಗ  ಇದನ್ನು ಅನುಭವಿಸಿರಬಹುದು. ಆದರೆ ನಮ್ಮ ಪೀಳಿಗೆಗೆ ಇದು ಹೊಸ ಅನುಭವ ) ಮುಂದೆ ಇಂತಹ ಪರಿಸ್ಥಿತಿ ಬರುವುದೂ ಬೇಡ. ಬಂದ ಸಂಕಷ್ಟವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಮುಂದೆ ಸಾಗುವುದೇ ಜೀವನ. ಯಾವುದೊ ರೋಗವನ್ನು,  ಸರ್ಕಾರವನ್ನು,  ಇನ್ಯಾವುದೋ ದೇಶವನ್ನು ಶಪಿಸಿಕೊಳ್ಳುತ್ತಾ ಕೂರುವುದರ ಬದಲು ಪ್ರಕೃತಿ ನಮ್ಮನ್ನು ನಾವು ಅರಿತುಕೊಳ್ಳುವುದಕ್ಕೆ ಒಂದು ಅವಕಾಶ ಕೊಟ್ಟಿದೆ ಎಂದೇ ಭಾವಿಸೋಣ.
ಇದರ ನಡುವೆ ದಿನಗೂಲಿಯನ್ನೇ ನಂಬಿ ಬದುಕುತ್ತಿರುವ ಅಕ್ಕ ಪಕ್ಕದವರಿಗೆ ಇರುವುದರಲ್ಲೇ ಸ್ವಲ್ಪ ಅಕ್ಕಿ ಬೇಳೆ ಕೊಟ್ಟು ವಿಪತ್ತಿನಲ್ಲಿ ಮಾನವರಾಗುವ ಅವಕಾಶ ಪಡೆದುಕೊಳ್ಳೋಣ. ಮನೆಯಲ್ಲೇ ಇದ್ದೇವೆ ಅಂತ ದಿನಕ್ಕೆ ನಾಲ್ಕು ಬಾರಿ  ರುಚಿ ರುಚಿಯಾಗಿ ತಿಂಡಿ ತಿನಿಸು ಮಾಡಿ ತಿನ್ನುವುದಕ್ಕೆ ಸ್ವಲ್ಪ ನಿಯಂತ್ರಣ ಹಾಕಿಕೊಳ್ಳಿ. ಯಾಕೆಂದರೆ ಈಗಾಗಲೇ ದಾಸ್ತಾನು ಇರುವ ಅಗತ್ಯ ವಸ್ತುಗಳನ್ನು ಬಾಯಿ ಚಪಲಕ್ಕೆ ಖಾಲಿ ಮಾಡಿಕೊಂಡರೆ ಮುಂದೆ ಸಮಸ್ಯೆಯಾಗಬಹುದು. ಎಚ್ಚರವಿರಲಿ.
ಎಲ್ಲರಿಗೂ ಶುಭವಾಗಲಿ.
#IndiaLockDown
#Corona
#stayHomeStaySafe